
ರಾಯಚೂರು ಮಹಾನಗರ ಪಾಲಿಕೆ 2026-27 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಹಿನ್ನೆಲೆ ರಾಯಚೂರು ನಗರದ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ವಿಮೆ ಹಾಗೂ ತುರ್ತು ನಿಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಲು ಕೋರಿ ಮಹಾನಗರ ಪಾಲಿಕೆ ಆಯುಕ್ತರು, ಆಡಳಿತಾಧಿಕಾರಿಗಳಾದ ಜುಬಿನ್ ಮೊಹಾಪಾತ್ರ ಅವರಿಗೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ಈ ಹಿಂದಿನ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ ಅಧ್ಯಕ್ಷತೆ ಹಾಗೂ ಪೌರಾಯುಕ್ತರ ಉಪಸ್ಥಿತಿಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪತ್ರಕರ್ತರ ಆರೋಗ್ಯ ವಿಮೆಗಾಗಿ 25 ಲಕ್ಷ ರೂಪಾಯಿಗಳ ಅನುದಾನ ಮೀಸಲಿಡಲು ತೀರ್ಮಾನ ಮಾಡಿರುವುದನ್ನ ಶ್ಲಾಘಿಸಿ ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಅನುದಾನ ಒದಗಿಸಿ ಅನುಷ್ಠಾನಕ್ಕೆ ತರಲು ಕೋರಲಾಯಿತು.
ಅಲ್ಲದೆ, ರಾಯಚೂರು ರಿಪೋರ್ಟರ್ಸ್ ಗಿಲ್ಡ್ ವತಿಯಿಂದ ಪತ್ರಕರ್ತರ ತುರ್ತು ನಿಧಿ ಆರಂಭಿಸಲಾಗಿದ್ದು ಈ ನಿಧಿಯ ಮೂಲಕ ಇತ್ತೀಚಿಗೆ ಹೃದಯಾ ಘಾತದಿಂದ ಮೃತಪಟ್ಟ ಹಿರಿಯ ಪತ್ರಕರ್ತನ ಕುಟುಂಬಕ್ಕೆ ವಿಧಾನ ಪರಿಷತ್ ಸರ್ಕಾರದ ಸಚೇತಕರಾದ ಮಹಮ್ಮದ್ ಸಲೀಂ ಆಹ್ಮದ್ ಅವರ ಮೂಲಕ 1 ಲಕ್ಷ ಮೊತ್ತದ ಪರಿಹಾರ ವಿತರಿಸಿ ಕುಟುಂಬಕ್ಕೆ ಆಸರೆಯಾಗಿದ್ದನ್ನ ಪೌರಾಯುಕ್ತರ ಗಮನಕ್ಕೆ ತಂದು, ಪತ್ರಕರ್ತರ ಕ್ಷೇಮಾಭಿವೃದ್ದಿಗಾಗಿ ತುರ್ತು ನಿಧಿಗೆ 10 ಲಕ್ಷ ರೂಪಾಯಿಗಳ ನೆರವನ್ನ ಬಜೆಟ್ ನಲ್ಲಿ ಒದಗಿಸಲು ಮನವಿ ಮಾಡಲಾಯಿತು.
ಈ ವೇಳೆ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಹಾಗೂ ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯ ಪತ್ರಕರ್ತರು ಹಾಜರಿದ್ದರು.
